Responsive Ad Slot

ಥಾಯ್ಲೆಂಡ್ ರಸ್ತೆ ಹಾಗೂ ಸ್ವಚ್ಚತೆ

ಥಾಯ್ಲೆಂಡ್ ಗೆ ಹೋಗುವ ಮುನ್ನ ನನ್ನ ಕಲ್ಪನೆಯಲ್ಲಿ ಇದ್ದುದು ಥಾಯ್ಲೆಂಡ್ ಒಂದು ನಮ್ಮಂತೆಯೇ ಬೆಳೆಯುತ್ತಿರುವ ದೇಶ.

ಬಹುಶಃ ನಮ್ಮಲ್ಲಿನ ಹಾಗೆ ಅಗೆದ ರಸ್ತೆಗಳು, ಕಂಡ ಕಂಡಲ್ಲಿ ಗುಂಡಿಗಳು, ಅಸಹನೀಯವಾದ ಗಬ್ಬು ಮೋರಿಗಳು ಇದ್ದೀತೇನೋ ಎಂದೆಣಿಸಿದ್ದೆ.

ನಾವು ಹೊರಟಿದ್ದು ಸಪ್ಟೆಂಬರ್ ಕೊನೆಯ ವಾರ. ಆಗ ತಾನೇ ಮಳೆಗಾಲ ಮುಗಿಯುತ್ತಿರುವ ಸಮಯ.

ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಿಂದ ಹಾರಿದ ವಿಮಾನ ಸುಮಾರು 3 ಗಂಟೆಗಳ ಕಾಲ ಆಕಾಶದಲ್ಲಿ ಪಯಣಿಸಿ ಥಾಯ್ಲೆಂಡಿನ ಬ್ಯಾಂಕಾಕ್ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ರಾತ್ರಿ ೧೨ ಗಂಟೆಗೆ ಹೊರಟ ವಿಮಾನ ಅಲ್ಲಿ ತಲುಪಿದ್ದು ಬೆಳಿಗ್ಗೆ ಸುಮಾರು ಅಲ್ಲಿನ ಸಮಯ ನಾಲ್ಕುವರೆ ಗಂಟೆಗೆ. ಅಲ್ಲಿನ ಗಡಿಯಾರ ಭಾರತದಕ್ಕಿಂತ ೧:೩೦ ಗಂಟೆ ಮುಂದೆ. ಆಗ ಭಾರತದಲ್ಲಿ ನಡು ರಾತ್ರಿ ಮೂರು ಗಂಟೆ!

ರನ್ ವೇ ಅಲ್ಲಿ ಇಳಿದ ವಿಮಾನ ತನ್ನ ವೇಗ ಕಡಿಮೆ ಮಾಡುತ್ತಾ ನಿಲ್ದಾಣದ  ಕಡೆ ತಿರುಗಿ ನಿದಾನವಾಗಿ ಒಳ ರಸ್ತೆಯಲ್ಲಿ ಸಾಗಿ ಏರ್ ಪೋರ್ಟ್ ಕಟ್ಟಡದ ಬಳಿ ಉಳಿದ ವಿಮಾನಗಳ ನಡುವೆ ಹೋಗಿ ನಿಂತಿತು.

ನಿಲ್ದಾಣದ ಸುರಂಗವನ್ನು ವಿಮಾನಕ್ಕೆ ಜೋಡಿಸಿ ವಿಮಾನದ ಬಾಗಿಲು ತೆರೆಯಲಾಯ್ತು.

ನಮಗೋ ಕುತೂಹಲ. ಥಾಯ್ಲೆಂಡ್ ಹೇಗಿರಬಹುದು? ಅಲ್ಲಿ ಏರ್ ಪೋರ್ಟ್ ಹೇಗಿದ್ದೀತು? ನಮ್ಮ ದೇಶಕ್ಕೆ ಹೋಲಿಸಿದರೆ ಸ್ವಚ್ಚತೆ, ರಸ್ತೆ ಹೇಗಿದೆ ತಿಳಿಯುವ ಬಯಕೆ.

ಮಲಗಿದ್ದ ಮಕ್ಕಳನ್ನು ಎಬ್ಬಿಸಿ ತೆಗೆದಿಟ್ಟಿದ್ದ ಚಪ್ಪಲಿ ಹಾಕಿಕೊಂಡು ವಿಮಾನದ ಒಳಗೆ ಮೇಲಿಟ್ಟಿದ್ದ ಲಗೇಜ್ ಕೆಳಗಿಳಿಸಿ ನಿದಾನವಾಗಿ ಅರೆ ನಿದ್ದೆ ಮಾಡಿ ಎದ್ದ ಸ್ಥಿತಿಯಲ್ಲೇ  ವಿಮಾನದ ಹೊರ ಬಾಗಿಲತ್ತ ಸಾಗಿದೆವು.

ಪರಿಚಾರಿಕೆ ಕೈ ಮುಗಿದು ಧನ್ಯವಾದ ಹೇಳಿದಳು, ನಾವೂ ಕೂಡಾ ನಮ್ಮನ್ನು ಸುರಕ್ಷಿತವಾಗಿ ತಲುಪಿಸಿದ ಅವರೆಲ್ಲರಿಗೂ ವಂದಿಸುತ್ತಾ ಸುರಂಗದ ಒಳ ಹೊಕ್ಕಿ ನಿಲ್ದಾಣದ ಕಡೆ ಹೊರ ಬಿದ್ದೆವು.

ನಮ್ಮ ಬಳಿ ಥಾಯ್ಲೆಂಡ್ ವೀಸಾ ಇರಲಿಲ್ಲ. ಆನ್ ಅರೈವಲ್ ವೀಸಾ ನಿಲ್ದಾಣದಲ್ಲೇ ಪಡೆಯಬೇಕಿತ್ತು. ಅದಕ್ಕೆ ಬೇಕಾದ ಫೋಟೋ, ಹಣ ಎಲ್ಲದರ ವ್ಯವಸ್ಥೆ ಆಗಿತ್ತು.

ವೀಸಾ ಎಲ್ಲಿ ಕೊಡುತ್ತಾರೆ ಎಂದು ಹುಡುಕುತ್ತಾ ಹೊರಟೆವು. ವೀಸಾ ಕೌಂಟರ್ ಗೆ ಹೋಗಿ ಅರ್ಜಿ ತುಂಬಿ ಸಲ್ಲಿಸಿ ವೀಸಾ ಗೆ ಕಾಯುತ್ತಾ ಇದ್ದೆವು.

ಸುವರ್ಣಭೂಮಿ ಏರ್ ಪೋರ್ಟ್ ಒಳಗಿನಿಂದ ಹೆಚ್ಚು ಕಡಿಮೆ ನಮ್ಮ ಬೆಂಗಳೂರಿನ ವಿಮಾನ ನಿಲ್ದಾಣದ ಅಷ್ಟೇ ಸುಸಜ್ಜಿತ ಕಟ್ಟಡ. ಬಹುಶಃ ಅಂತರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಕಟ್ಟಲಾಗಿದೆ.

ವೀಸಾ ಸಿಕ್ಕಾಯ್ತು! ಹುರ್ರೇ!! ಮೊದಲೇ ಟ್ರಾವೆಲ್ ಏಜೆಂಟ್ ಬುಕ್ ಮಾಡಿದ್ದ ಕ್ಯಾಬ್ ಬಂತು. ನಮ್ಮ ಲಗೇಜ್ ಹಾಕಾಯ್ತು. ನಾವೂ ಕುಳಿತಾಯ್ತು. ಕ್ಯಾಬ್ ನಿದಾನಕ್ಕೆ ಏರ್ ಪೋರ್ಟ್ ಹೊರ ಹೊರಟಿತು.

ಸುಸಜ್ಜಿತ ರಸ್ತೆಗಳು

ಟ್ಯಾಕ್ಸಿ ವಿಮಾನ ನಿಲ್ದಾಣದಿಂದ ಹೊರಟು ಸುಮಾರು ದೂರ ಸಾಗಿ ಹೈ ವೇಯಲ್ಲಿ ಹೋಟೆಲ್ ಕಡೆ ಸಾಗುತ್ತಿತ್ತು.

ಒಂದು ಪುಟ್ಟ ಮಗು ಅಚ್ಚರಿಯಿಂದ ಸುತ್ತ ನೋಡುವಂತೆ ನಾವು ಎಲ್ಲ ಕಡೆ ವೀಕ್ಷಿಸುತ್ತಿದ್ದೆವು. ನಿಲ್ದಾಣದಿಂದ ದೂರ ಸಾಗಿದಂತೆ ರಸ್ತೆಗಳು ಮಾಮೂಲಿ ರಸ್ತೆ ಆದೀತು ಎಂಬುದು ನನ್ನ ಎಣಿಕೆ ಆಗಿತ್ತು.

ಇಲ್ಲಿ ನನ್ನ ಕಲ್ಪನೆ ಎಲ್ಲಾ ತಿರುವು ಮುರುವು! ವಾರೆ ವಾಹ್. ಎಂತಹ ಅಮೋಘ ರಸ್ತೆಗಳು!!

ನಿಜ ಮೊಸರಲ್ಲೂ ಕಲ್ಲು ಹುಡುಕುವವರಿಗೆ ಎಲ್ಲೋ ಒಂದೆರಡು ಕಡೆ ಸಣ್ಣ ಬಿರುಕು ಕಂಡೀತು!

ಹೋಟೆಲ್ ಗೆ ಹೋಗುವ ದಾರಿಯಲ್ಲಿ, ನಮ್ಮ ಗಮನ ಸೆಳೆದಿದ್ದು ಅಲ್ಲಿನ ಸುಂದರ ರಸ್ತೆಗಳು!

ಸ್ವಚ್ಚ ರಸ್ತೆ, ನೀಟಾಗಿ ಮಾಡಿರುವ ರಸ್ತೆಯ ಲೇನ್ ಗುರುತುಗಳು. ಶಿಸ್ತಿನ ಸಿಪಾಯಿಯಂತೆ ತಮ್ಮ ತಮ್ಮ ಲೇನ್ ಅಲ್ಲಿ ಹೋಗುತ್ತಿರುವ ಕಾರುಗಳು, ಬಸ್ಸುಗಳು. ಇದು ಹೈವೇ ನಮ್ಮಲ್ಲೂ ಕಮ್ಮಿನಾ ಅಂದು ಕೊಳ್ಳುತ್ತಿರುವಾಗಲೇ ಸಿಟಿಯ ಒಳಗೂ ಅದೇ ಶಿಸ್ತು. ಗುಂಡಿ ಇರದ ರಸ್ತೆಗಳು.

ಹಂಪುಗಳು ಜಂಪುಗಳಂತೂ ಕಾಣಸಿಗಲಿಲ್ಲ. ಸಿಗ್ನಲ್ ಗಳನ್ನು ಸಾಧ್ಯವಿದ್ದಷ್ಟು ಅನುಸರಿಸುತ್ತಿದ್ದದ್ದು ಕಂಡು ಬಂತು.

ಕೆಲವು ಕಡೆ ಸಿಮೆಂಟಿನ ರಸ್ತೆ ಇದ್ದರೆ ಕೆಲವು ಕಡೆ ಟಾರ್ ರಸ್ತೆ ಇತ್ತು.

ನಾವು ಹೋಗಿದ್ದು ಸೆಪ್ಟೆಂಬರ್ ಅಲ್ಲಿ ಮಳೆಗಾಲ ಮುಗಿಯುವ ಸಂದರ್ಭದಲ್ಲಿ. ಆ ಸಮಯದಲ್ಲೂ ಕೂಡಾ ಅಲ್ಲಿನ ರಸ್ತೆ ಗುಂಡಿಗಳಿಲ್ಲದೇ ನೀಟಾಗಿರುವದನ್ನು ನೋಡಿದಾಗ ಅಚ್ಚರಿ ಆಯ್ತು. ಅಲ್ಲಿಯೂ ನಮ್ಮ ಮಲೆನಾಡಲ್ಲಿ ಬೀಳುವ ಹಾಗೆ ಮಳೆ ಬೀಳುತ್ತದೆ.

ನಮ್ಮಲ್ಲಿ ಮಳೆಗಾಲದ ಕೊನೆಯಲ್ಲಿ ರಸ್ತೆ ಹೇಗಿರುತ್ತೆ ಎಂಬುದನ್ನು ವಿವರಿಸ ಬೇಕಾಗಿಲ್ಲ.

ಯಾವ ರೀತಿ ಅಲ್ಲಿ ಚರಂಡಿ ನಿರ್ವಹಣೆ, ವಿದ್ಯುತ್ ತಂತಿಗಳು, ಟಿವಿ / ಆಫ್ಟಿಕಲ್ ಕೇಬಲ್ ಮಾಡುತ್ತಾರೆ? ಜೋರಾಗಿ ಮಳೆ ಬಂದರೂ ಗುಂಡಿ ಆಗದಂತೆ ಹೇಗೆ ರಿಪೇರಿ ಮಾಡುತ್ತಾರೆ. ಇವೆಲ್ಲ ಅಧ್ಯಯನ ಯೋಗ್ಯ.

ದಶಕಗಳ ಹಿಂದೆ ನಮ್ಮ ರಾಜಕಾರಣಿಗಳೆಲ್ಲ ವಿದೇಶಗಳಿಗೆ ಚರಂಡಿ-ಗಿರಂಡಿ-ಪಿರಂಡಿ ಅಧ್ಯಯನಕ್ಕೆ ಹೋಗಿ ಬಂದಂತೆ ನೆನಪು. ಏನೂ ಪ್ರಯೋಜನ ಆದ ಹಾಗೆ ಕಾಣ್ತಾ ಇಲ್ಲ. ಇಲ್ಲಿ ಹೋಗಿ ಬಂದಿದ್ದರೆ ಚೆನ್ನಾಗಿತ್ತೇನೋ!

ಶಿಸ್ತಿನಿಂದ ಸಾಗುವ ಟ್ರಾಫಿಕ್

ಹಾಗಂತ ಬ್ಯಾಕಾಂಕ್ ಅಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ವೀಕ್ ಡೇಗಳಲ್ಲಿ ವಾಹನಗಳ ಮಹಾಪೂರವೇ ಇರುತ್ತೆ. ಆದರೂ ಶಿಸ್ತಿದೆ. ಮಧ್ಯೆ ನುಗ್ಗಿ ಪದೇ ಪದೇ ಲೇನ್ ಬದಲಾಯಿಸುವದು ಕಾಣ ಸಿಗಲಿಲ್ಲ.

ಟ್ರಾಫಿಕ್ ಗೆ ಅನುಕೂಲ ಆಗುವ ಹಾಗೆ ರೋಡಿನ ಮೇಲೆ ಲೇನ್ ಮಾರ್ಕ್ ಗಳು. ಯಾವ ಪೇಂಟ್ ಬಳಸುತ್ತಾರೋ ಮಳೆಗಾಲದಲ್ಲೂ ಒಂಚೂರು ಅಳಿಸಿ ಹೋಗಿರಲಿಲ್ಲ. 

ಈ ತರಹದ ಗುಣಮಟ್ಟದ ರಸ್ತೆ ಇದ್ದರೆ ಬಹುಶಃ ಟ್ರಾಫಿಕ್ ಜಾಸ್ತಿ ಇದ್ದರೂ ಕೂಡಾ ಸರಾಗವಾಗಿ ವಾಹನಗಳು ಹೋಗುತ್ತವೆ. ಎದುರಿಗೆ ಗುಂಡಿ ಬಂತು ಎಂದು ಲೇನ್ ಬದಲಾಯಿಸೋ ಪ್ರಮೇಯ ಇಲ್ಲ.

ವಿಶಾಲವಾದ ಪುಟ್ ಪಾತ್ ಗಳು

ಅಗಲವಾದ ರಸ್ತೆಗಳಲ್ಲಿ ವಿಶಾಲವಾದ ಪುಟ್ ಪಾತ್ ಗಳಿವೆ. ಅಲ್ಲಲ್ಲೀ ನಮ್ಮಲ್ಲಿರೋ ಹಾಗೆ ಪುಟ್ಟ ಬೀದಿ ವ್ಯಾಪಾರಿಗಳನ್ನು ಪುಟ್ ಪಾತ್ ಅಲ್ಲಿ ಕಾಣಬಹುದು. ಆದರೆ ನಾವು ನಡೆಯದ ಹಾಗೆ ಆಕ್ರಮಿಸಿಕೊಂಡಿರುವದಿಲ್ಲ.

ಪುಟ್ ಪಾತ್ ಗಳಲ್ಲಿ ಅನೇಕ ಕಡೆ ಚಿಕ್ಕ ಚಿಕ್ಕ ಮರಗಳಿದ್ದವು. ನೀಟಾಗಿ ಅವುಗಳ ಬುಡದಲ್ಲಿ ಚೌಕಾಕಾರದಲ್ಲಿ ಜಾಗ ಬಿಟ್ಟಿದ್ದರು. ಮೆಟ್ರೋದ ಹಾದಿಯ ಕೆಳಗೆ ಕೂಡಾ ಮರಗಳಿದ್ದವು.

ಕಿರಿದಾದ ರಸ್ತೆಗಳಲ್ಲಿ ಒಂದೇ ಕಡೆ ಪುಟ್ ಪಾತ್ ಇತ್ತು.

ಒಂದೆರಡು ಸ್ಯಾಂಪಲ್ ಬ್ಯಾಂಕಾಕ್, ಥಾಯ್ಲೆಂಡ್ ಫುಟ್ ಪಾತ್ ಚಿತ್ರ ನಿಮಗಾಗಿ.


ರಸ್ತೆ ಅಗೆತ, ಕಸದ ರಾಶಿ ಇಲ್ಲ

ಎಲ್ಲೂ ಅನವಶ್ಯಕ ಅಗೆತ ಇಲ್ಲ. ಮಣ್ಣಿನ ಮರಳಿನ ಗುಡ್ಡೆ ಹಾಕಿ ರಾಡಿ ಮಾಡಿಲ್ಲ. ಕಂಡ ಕಂಡಲ್ಲಿ ಕಸ ಬಿಸಾಕಿದ್ದು ಎಲ್ಲೂ ಕಂಡ ನೆನಪಿಲ್ಲ.

ವೈರ್ ಗಳು ಕೇಬಲ್ ಗಳೆಲ್ಲವನ್ನೂ ನೀಟಾಗಿ ಕಟ್ಟಿ ರಸ್ತೆಯ ಪಕ್ಕದ ಕಂಬದಲ್ಲಿ ಇತ್ತು. ಬಹುಶಃ ಅದು ಕೂಡಾ ರಸ್ತೆ ಅಗೆತ ಕಡಿಮೆ ಆಗಲು ಕಾರಣ ಇರಬಹುದು.

ಇದು ಕೇವಲ ಮುಖ್ಯ ರಸ್ತೆ ಮಾತ್ರ ಅಲ್ಲ ನಾವು ಓಡಾಡಿದ ಒಳ ರಸ್ತೆಗಳೂ ಅಷ್ಟೇ ನೀಟು ಮತ್ತು ಕ್ಲೀನ್.

ಪಟ್ಟಾಯಾ, ಥಾಯ್ಲೆಂಡ್ ಮಾರ್ಕೆಟ್ ರಸ್ತೆಯ ನೋಟ (ಮೇಲಿನ ಚಿತ್ರ)

ರಸ್ತೆಯ ಮಧ್ಯೆ ಮನೋಹರ ಗಾರ್ಡನ್

ಥಾಯ್ಲೆಂಡ್ ರಸ್ತೆಯೇನೋ ಸುಂದರ ಮಾತಿಲ್ಲ. ಅದಕ್ಕಿಂತ ಸುಂದರ ಅದರ ಮಧ್ಯೆ ಇರುವ ಹಾಗೂ ಕೆಲವೊಮ್ಮೆ ಪುಟ್ ಪಾತ್ ಅಲ್ಲಿ ಕೂಡಾ ಇರುವ ಗಾರ್ಡನ್. ಹೆಚ್ಚಿನ ಹೈವೇ, ಮೆಟ್ರೋ ಮಾರ್ಗದ ಕೆಳಗೆ ಇದನ್ನು ಕಾಣಬಹುದು.

ಯಾರೋ ಕಾಲ ಕಾಲಕ್ಕೆ ಅವನ್ನೆಲ್ಲಾ ನೀಟಾಗಿ ಟ್ರಿಮ್ ಮಾಡಿ ಆಕಾರ ಕೊಟ್ಟಂತೆ ಇತ್ತು.

ಕಂಡ ಕಂಡಲ್ಲಿ ಜಾಹೀರಾತು ಬೋರ್ಡ್ ಗಳಿಲ್ಲ. ಆಯಾ ನಿಗದಿತ ಜಾಗದಲ್ಲಿ ಮಾತ್ರ ಜಾಹೀರಾತು ಫಲಕ ಇದ್ದವು.

ಕಸದ ರಾಶಿ ಅಂತೂ ಇಲ್ಲವೇ ಇಲ್ಲ.

ಥಾಯ್ಲೆಂಡ್ ಅಲ್ಲಿ ಮುಖ್ಯ ರಸ್ತೆಗಳಲ್ಲಿ ನೀಟಾಗಿ ಬೆಳೆಸಿದ ಪೊದೆಗಳನ್ನು ಮರಗಳನ್ನು ಕಾಣಬಹುದು. ತೀರಾ ಕಿರಿದಾದ ರಸ್ತೆಗಳಲ್ಲಿ ಮರ-ಗಿಡಗಳಿರುವದಿಲ್ಲ. ಹಾಗೂ ಒಂದೇ ಕಡೆ ಫುಟ್ ಪಾತ್ ಇರುತ್ತದೆ.

ಈ ಕೆಳಗಿನ ಮೂರು ಚಿತ್ರ ಒಮ್ಮೆ ನೋಡಿ. ಇವು ಕೇವಲ ಸ್ಯಾಂಪಲ್ ಮಾತ್ರ. ಇವೆಲ್ಲ ಬ್ಯಾಂಕಾಕ್ ಸಿಟಿಯವು.

ರಸ್ತೆಗೆ ಹಾಕಿದ ಗೆರೆ, ನಡುವಿನ ಸುಂದರ ಉದ್ಯಾನವನ ಗಮನಿಸಿ.





ಉತ್ತಮ ವೈರ್ ನಿರ್ವಹಣೆ

ವೈರ್ ನಿರ್ವಹಣೆ ಅತ್ಯುತ್ತಮ ಅಂತಾನೆ ಹೇಳಬಹುದು. ಎಲ್ಲೂ ನಿಮಗೆ ಅಡ್ಡಾದಿಡ್ಡಿಯಾಗಿ ರಸ್ತೆಯೆಲ್ಲಾ ತುಂಬಿ ತುಳುಕುವ ವೈರ್ ಸಿಗದು. ಬದಲಾಗಿ ರಸ್ತೆಯ ಒಂದು ಕಡೆ ಜಡೆಯಂತೆ ನೀಟಾಗಿ ಹೆಣೆದು ಕಟ್ಟಿರುತ್ತಾರೆ. ನಿಜ ತುಂಬಾ ವೈರ್ ಇರುತ್ತೆ ಆದರೆ ಒಂದೇ ಕಡೆ ಕಂಬಕ್ಕೆ ಕಟ್ಟಿರುತ್ತಾರೆ.

ಬಹುಶಃ ವೈರ್ ಹೊರಗೆ ಇರುವದರಿಂದ ಪದೇ ಪದೇ ರಸ್ತೆ ಅಗೆಯುವದು ತಪ್ಪುತ್ತೇನೋ! ತಿಳಿದವರು ಹೇಳಬೇಕು.

ಕಸದ ಉತ್ತಮ ನಿರ್ವಹಣೆ

ಪಟ್ಟಾಯಾ, ಥಾಯ್ಲೆಂಡ್ ಮಾರ್ಕೆಟ್ ರಸ್ತೆಯ ನೋಟ (ಮೇಲಿನ ಚಿತ್ರ)

ಒಂದು ಸಿಟಿ ಕ್ಲೀನ್ ಅನ್ನಿಸಲು ಅಲ್ಲಿನ ಕಸದ ನಿರ್ವಹಣೆ ಮುಖ್ಯ ಕಾರಣ. ಎಷ್ಟೋ ಕಡೆ ಅಂಗಡಿ, ಅಪಾರ್ಟಮೆಂಟ್ ಅಲ್ಲಿ ಕಸವನ್ನು ನೀಟಾಗಿ ಕಪ್ಪು ಕವರ್ ಅಲ್ಲಿ ಹಾಕಿ ಇಲ್ಲಾ ಕಸದ ಬುಟ್ಟಿಯಲ್ಲಿ ಹಾಕುತ್ತಿರುವದು ಕಂಡು ಬಂತು.

ಸೂಪರ್ ಮಾರ್ಕೆಟ್ ಅಲ್ಲಿ ಯಾರೋ ಏನನ್ನೋ ಚೆಲ್ಲಿ ರಾಡಿ ಮಾಡಿದಾಗ ತಕ್ಷಣ ಒಬ್ಬಳು ಬಂದು ಅದನ್ನು ಕ್ಲೀನ್ ಮಾಡಿದ್ದು ಕಂಡು ಬಂತು.

ನಾವು ಹಲವು ಲೋಕಲ್ ಬಸ್ ಅಲ್ಲಿ ಪ್ರಯಾಣ ಮಾಡಿದ್ದೆವು. ಆಗ ಒಂದು ಬಸ್ ಅಲ್ಲಿ ಡ್ರೈವರ್ ಕೂಡಾ ಕಸಬರಿಗೆ ಹಿಡಿದು ಬಸ್ ಒಳಗೆ ಕಸ ಗುಡಿಸಿ ಸ್ವಚ್ಚ ಮಾಡಿದ! ಬಸ್ ಹಿಂದೆ ನಾವು ಕುಳಿತ ಜಾಗದ ಪಕ್ಕ ಮೋಪ್ (ಒರೆಸುವ ಕೋಲು) ಬೇರೆ ಇತ್ತು. ಅದನ್ನು ಯಾವಾಗ ಬಳಸುತ್ತಾರೊ ಗೊತ್ತಿಲ್ಲ. ಅವರ ಸ್ವಚ್ಚತೆಯ ಕಾಳಜಿಗೆ ಇದು ನಿದರ್ಶನ.

ಅಲ್ಲಿನ ಸ್ವಚ್ಚತೆ ಗಮನಿಸಿದಾಗ ನಮಗೆ ಕೈಯಲ್ಲಿದ್ದ ಖಾಲಿ ಚಿಪ್ಸ್ ಪ್ಯಾಕೆಟ್ ಬಿಸಾಕಲೂ ಸಹ ಮನಸ್ಸು ಬರದು!

ಪಬ್ಲಿಕ್ ಟಾಯ್ಲೆಟ್ ಗಳು

ಪಬ್ಲಿಕ್ ಟಾಯ್ಲೆಟ್ ಗಳು ಬ್ಯಾಂಕಾಕ್ ಅಲ್ಲಿ ಪರವಾಗಿಲ್ಲ ಅನ್ನ ಬಹುದು. ಆದರೆ ಪಟ್ಟಾಯದ ಐಲ್ಯಾಂಡ್, ತೇಲಾಡುವ ಮಾರ್ಕೆಟ್ ನಂತಹ ಹಳ್ಳಿಯ ಕಡೆ ಬಾತ್ ರೂಂ ಸಾಧಾರಣ ಇತ್ತು. ಆದರೆ ಎಲ್ಲೂ ಮೂಗು ಮುರಿಯುವಷ್ಟು ಗಲೀಜಾಗಿರಲಿಲ್ಲ. ಸ್ವಲ್ಪ ಹಳೆಯದಾಗಿತ್ತು ಅನ್ನ ಬಹುದು.

ಎಲ್ಲ ಕಡೆ ನೀರಿನ ವ್ಯವಸ್ಥೆ ಇತ್ತು. ಅಲ್ಲಿಯೂ ಕೂಡಾ ಶೌಚಾಲಯದಲ್ಲಿ ಏಷಿಯಾದ ಇತರ ದೇಶಗಳಂತೆಯೇ ನೀರಿನ ಬಳಕೆ ಜಾಸ್ತಿ ಅದಕ್ಕೆ ಟಾಯ್ಲೆಟ್ ಎಲ್ಲಾ ಒದ್ದೆ ಒದ್ದೆ.

ಕೊನೆಯ ಮಾತು


ಪಟ್ಟಾಯಾ, ಥಾಯ್ಲೆಂಡ್ ಮಾರ್ಕೆಟ್ ರಸ್ತೆಯ ನೋಟ (ಮೇಲಿನ ಚಿತ್ರ)

ಉತ್ತಮ ರಸ್ತೆ, ಸ್ವಚ್ಚ ಜಾಗ ನಮ್ಮಲ್ಲೂ ಫೈವ್ ಸ್ಟಾರ್ ಹೋಟೆಲ್ ಅಲ್ಲಿ ಐಟಿ ಪಾರ್ಕ್ ಅಲ್ಲಿ ಕಂಡು ಬರುತ್ತೆ. ಅದು ವಿಶೇಷ ಅಲ್ಲ. 

ಆದರೆ ಇಡಿ ಸಿಟಿಗೆ ಸಿಟಿ, ಪಟ್ಟಣಕ್ಕೆ ಪಟ್ಟಣ ಸ್ವಚ್ಚ ಆಗಿರುವದು ಥಾಯ್ಲೆಂಡ್ ಸಿಟಿ ವಿಶೇಷ. ಅಲ್ಲಿನ ಜನ, ಅಂಗಡಿ ಎಲ್ಲ ಕಡೆ ಜಾಗ್ರತರಾಗಿ ಕಸ ಕ್ಲೀನ್ ಮಾಡುತ್ತಾ ಇರುವದು ಥಾಯ್ಲೆಂಡ್ ಅಲ್ಲಿ ಕಾಣ ಬಹುದು.

ಕನಿಷ್ಟ ನಾವು ಪ್ರವಾಸಿಗಳು ಓಡಾಡುವ ಜಾಗದಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ ಸ್ವಚ್ಚತೆ ಇತ್ತು.

ನಾವು  ಥಾಯ್ಲೆಂಡ್ ಅಲ್ಲಿ ಇದ್ದದ್ದು ೯ ದಿನ ಮಾತ್ರ. ಆ ಸಂದರ್ಭದ ತಿರುಗಾಟದಲ್ಲಿ ಕಂಡದ್ದು ಇಷ್ಟು. ನಿಜ ಹುಳುಕನ್ನೇ ಹುಡುಕಿ ಹೋದರೆ ಎಲ್ಲಾದರೂ ಸಿಕ್ಕು ಬಿಡುತ್ತಿತ್ತೇನೋ. ಪ್ರವಾಸಿಗಳು ಓಡಾಡುವ ಜಾಗವನ್ನಾದರೂ ಇಷ್ಟು ಕ್ಲೀನಾಗಿ ಇಟ್ಟಿರುವದು ನಿಜಕ್ಕೂ ಗ್ರೇಟ್!

ನಾವು ಥಾಯ್ಲೆಂಡ್ ಜನತೆಯಿಂದ ಕಲಿಯುವ ಸ್ವಚ್ಚತೆಯ ಪಾಠ ತುಂಬಾ ಇದೆ. ಅದರ ಜೊತೆಗೆ ನಮ್ಮಲ್ಲಿನ ಬ್ರಷ್ಟಾಚಾರಕ್ಕೂ ಕಡಿವಾಣ ಬೇಕು. ಬಹುಶಃ ದೊಡ್ಡ ಖಾಸಗಿ ಕಂಪನಿಗಳು ರಸ್ತೆ ನಿರ್ಮಾಣ-ನಿರ್ವಹಣೆ ಮಾಡಿದರೆ ಒಳ್ಳೆಯದೇನೋ.

ಒಟ್ಟಿನಲ್ಲಿ ಥಾಯ್ಲೆಂಡ್ ನ ಬ್ಯಾಂಕಾಕ್, ಪಟ್ಟಾಯಾ ಕಸ ನಿರ್ವಹಣೆ, ರಸ್ತೆ, ಫುಟ್ ಪಾತ್ ಮೊದಲಾದವುಗಳಿಗೆ ಮಾದರಿ ಎಂದರೆ ತಪ್ಪಲ್ಲ.

ನೀವು ಥಾಯ್ಲೆಂಡ್ ಗೆ ಹೋಗಿದ್ರಾ? ನಿಮಗೆ ಏನು ಅನ್ನಿಸಿತು? ಕಮೆಂಟ್ ಹಾಕಿ.

ಥಾಯ್ಲೆಂಡ್ ಅಥವಾ ಇನ್ಯಾವುದೇ ವಿದೇಶಕ್ಕೆ ಹೋಗುವಾಗ ಹಣ ಉಳಿಸುವ ಮಾರ್ಗಕ್ಕಾಗಿ ಈ ಮುಂದಿನ ಲೇಖನ ಓದಿ. ಥಾಯ್ಲೆಂಡ್ ಪ್ರವಾಸಕ್ಕೆ ಹೋದಾಗ ಹಣ ಉಳಿಸುವ ಮಾರ್ಗ ಯಾವುದು?

ಓಮ್ ನ ನಿಯಮ

ಕರೆಂಟ್ ಇಲ್ಲದಿದ್ದರೆ ಇಂದು ಮನುಷ್ಯ ಬದುಕಲು ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಅದರ ಮೇಲೆ ಅವಲಂಬಿತ. ನಮ್ಮ ಸುತ್ತ ಮುತ್ತ ಇರುವ ಈ ವಿದ್ಯುತ್ ಗೆ ಸಂಬಂಧಿಸಿದ ನಿಯಮವೇ ಓಮ್ ನ ನಿಯಮ.

ಹೇಗೆ ನೀರಿನ ಪಂಪ್ ಪ್ರೆಶರ್ / ಒತ್ತಡ ಜಾಸ್ತಿ ಆದ ಹಾಗೆ ಪೈಪ್ ಅಲ್ಲಿ ನೀರಿನ ಹರಿವು ಜಾಸ್ತಿ ಆಗುತ್ತೋ ಹಾಗೆ ವೋಲ್ಟೇಜ್ ಜಾಸ್ತಿ ಆದ ಹಾಗೆ ಇಲೆಕ್ಟ್ರಾನ್ ಗಳ ಪ್ರವಾಹ ಅರ್ಥಾತ್ ವಿದ್ಯುತ್ ಹರಿವು ಜಾಸ್ತಿ ಆಗುತ್ತೆ ಅನ್ನೋದೆ ಓಮ್ ನ ನಿಯಮದ ಸಾರಾಂಶ.

ಓಮ್ ನ ನಿಯಮದ ಬಗ್ಗೆ ಇಲ್ಲಿ ವಿವರವಾಗಿ ತಿಳಿಯೋಣ.

ಸರಳ ರೀತಿಯಲ್ಲಿ ಓಮ್ ನ ನಿಯಮ ಏನು?

ಒಂದು ತಂತಿ (ವೈರ್) ಅಲ್ಲಿ ೫ ವೋಲ್ಟ್ ವಿದ್ಯುತ್ ನೀವು ಹರಿಸುತ್ತೀರಾ ಎಂದು ಕೊಳ್ಳೋಣ. ಆಗ X ಎಂಪಿಯರ್ ಕರೆಂಟ್ ವೈರ್ ಅಲ್ಲಿ ಹರಿಯಿತು ಎಂದಿಟ್ಟು ಕೊಳ್ಳೋಣ. ಅದೇ ತಂತಿಯಲ್ಲಿ ಈಗ ನೀವು ೧೦ ವೋಲ್ಟ್ ಅಂದರೆ ಎರಡು ಪಟ್ಟು ವೋಲ್ಟೇಜ್ ವಿದ್ಯುತ್ ಹರಿಸಿದರೆ ಆಗ ೨X ಎಂಪಿಯರ್ ಕರೆಂಟ್ ಹರಿಯುತ್ತೆ. 

ಒಂದೇ ತಂತಿಯಲ್ಲಿ ಅದೇ ಅಂತರದ ನಡುವೆ ಬೇರೆ ಬೇರೆ ವೋಲ್ಟೇಜ್ ನ ವಿದ್ಯುತ್ ಹರಿಸಿದಾಗ ಕರೆಂಟ್ ಅಂದರೆ ವಿದ್ಯುತ್ ಹರಿವು ಕೂಡಾ ಅದಕ್ಕೆ ಅನುಗುಣವಾಗಿ ಬದಲಾಗುತ್ತೆ. ಇದೇ ಓಮ್ ನ ನಿಯಮ. ಇಲ್ಲಿ ಒಂದು ಕಂಡೀಶನ್ ಏನೆಂದರೆ ವೈರ್ ನ ತಾಪಮಾನ / ಗಾತ್ರ ಎಲ್ಲ ಕೂಡಾ ಹಾಗೆಯೇ ಇರಬೇಕು.

ಇದನ್ನು ನೀರಿಗೆ ಹೋಲಿಸುವದಾದರೆ ಪಂಪ್ ನಿಂದ ನೀರು ಹರಿಸಿದರೆ ಪಂಪ್ ಒತ್ತಡಕ್ಕೆ ಅನುಗುಣವಾಗಿ ನೀರಿನ ಪ್ರವಾಹ ಹೆಚ್ಚು ಕಡಿಮೆ ಆಗುತ್ತೆ ಅಲ್ವಾ? ಹೆಚ್ಚು ಪ್ರೆಶರ್ ಇದ್ದರೆ ಜಾಸ್ತಿ ವೇಗವಾಗಿ ನೀರು ಬಂದರೆ ಕಡಿಮೆ ಒತ್ತಡ ಇದ್ದಾಗ ನೀರು ನಿಧಾನವಾಗಿ ಬರುತ್ತೆ. 

ಅದೇ ರೀತಿ ಪೈಪ್ ಅಗಲ ಆಗಿದ್ದರೆ ಕಿರಿದಾದ ಪೈಪ್ ಗಿಂತ ಜಾಸ್ತಿ ನೀರಿನ ಹರಿವು ಇರುತ್ತೆ. ಪೈಪ್ ಕಿರಿದಾಗಿದ್ದರೆ ರೆಸಿಸ್ಟನ್ಸ್ ಅಥವಾ ತಡೆ ಜಾಸ್ತಿ ಇರುತ್ತೆ.

ಈ ಪರಿಕಲ್ಪನೆ ವಿದ್ಯುತ್ ಗೂ ಕೂಡಾ ಅನ್ವಯ ಆಗುತ್ತೆ.

ಓಮ್ ನ ನಿಯಮವನ್ನು ವಿವರವಾಗಿ ತಿಳಿಯುವ ಮುಂಚೆ ಅದಕ್ಕೆ ಸಂಬಂಧಿಸಿದ ಕೆಲವು ಪದಗಳ ಬಗ್ಗೆ ಅರಿಯೋಣ.

ವಿದ್ಯುತ್ ಎಂದರೆ ಏನು?

ನಮ್ಮ ಸುತ್ತ ಮುತ್ತ ಅಷ್ಟೊಂದು ಇಲೆಕ್ಟ್ರಿಕ್ ಉಪಕರಣಗಳು ವಿದ್ಯುತ್ ಸಹಾಯದಿಂದ ಕೆಲಸ ಮಾಡುವದನ್ನು ನೋಡುತ್ತೇವೆ ಅಲ್ವಾ?  ಆ ಪವರ್ ಪ್ಲಗ್ ನಿಂದ ಅಥವಾ ಬ್ಯಾಟರಿ ಸೆಲ್ ನಿಂದ ಏನು ಬಂದು ಈ ಉಪಕರಣ ಕೆಲಸ ಮಾಡುವಂತೆ ಮಾಡುತ್ತೆ? ಈ ವಿದ್ಯುತ್ ಎಂದರೆ ಏನು? ಸರಳವಾಗಿ ಹೇಳಬೇಕೆಂದರೆ ವಿದ್ಯುತ್ ಎಂದರೆ  ಇಲೆಕ್ಟ್ರಾನ್ ಗಳ ಹರಿವು ಅಥವಾ ಪ್ರವಾಹ.

ಅಂದರೆ ಆ ಪವರ್ ಪ್ಲಗ್ ನಿಂದ ಅಥವಾ ಬ್ಯಾಟರಿ ಸೆಲ್ ನಿಂದ ಬರುವದು ಇಲೆಕ್ಟ್ರಾನ್ ಗಳ ಪ್ರವಾಹ.

ಪ್ರತಿ ಅಣುವಿನಲ್ಲಿ ಇಲೆಕ್ಟ್ರಾನ್ / ಪ್ರೋಟೋನ್ / ನ್ಯೂಟ್ರೋನ್ ಎಂಬ ಮೂರು ಬಗೆಯ ಸೂಕ್ಷ್ಮ ಕಣ ಇರುತ್ತದೆ. ಈ ಇಲೆಕ್ಟ್ರಾನ್ ಗಳಿಗೆ ಚಾರ್ಜ್ ಮೂಲಕ ಶಕ್ತಿ ದೊರೆತಾಗ ಅವು ಚಲಿಸಲಾರಂಭಿಸುತ್ತವೆ. ಹೀಗೆ ಇಲೆಕ್ಟ್ರಾನ್ ಗಳು ಒಂದು ಅಣುವಿನಿಂದ ಇನ್ನೊಂದಕ್ಕೆ ಹರಿಯುತ್ತಾ ಹೋದಾಗ ಅದೇ ಇಲೆಕ್ಟ್ರಿಕ್ ಪ್ರವಾಹ (ಕರೆಂಟ್). ಈ ಇಲೆಕ್ಟ್ರಾನ್ ಗಳ ಪ್ರವಾಹವನ್ನೇ ನಾವು ವಿದ್ಯುತ್ ಎನ್ನುತ್ತೇವೆ.

ಒಂದು ವಿಷಯ ಗಮನದಲ್ಲಿಡಿ ಸರ್ಕ್ಯುಟ್ ಪೂರ್ಣ ಆದಾಗ ಮಾತ್ರ ಈ ಇಲೆಕ್ಟ್ರಾನ್ ಗಳ ಪ್ರವಾಹ ಹರಿಯುವದು.

ಈ ಇಲೆಕ್ಟ್ರಾನ್ ಗಳ ಚಲನೆ ಶಕ್ತಿಯನ್ನು ಉಪಕರಣಗಳು ಬಿಸಿ / ಮ್ಯಾಗ್ನೆಟಿಕ್ / ಬೆಳಕು ಇತ್ಯಾದಿ ಬೇರೆ ರೂಪಕ್ಕೆ ಬದಲಾಯಿಸಿ ಕೆಲಸ ಮಾಡುತ್ತವೆ.

ವಿದ್ಯುತ್ ಎಲ್ಲಿ ಹರಿಯುತ್ತದೆ?

ನೀರನ್ನು ನಾವು ಪೈಪ್ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹರಿಸಬಹುದು ಅಲ್ವಾ?

ಅದೇ ರೀತಿ ವಿದ್ಯುತ್ ಪ್ರವಾಹ ಹರಿಯಲು ಮಾರ್ಗ ಬೇಕು ಅಲ್ವಾ? ಅದೇ ವಿದ್ಯುತ್ ವಾಹಕ.

ವಿದ್ಯುತ್ ನಮ್ಮ ಸುತ್ತ ಇರುವ ಸಾಮಾನ್ಯ ಗಾಳಿಯಲ್ಲಿ ಹರಿಯದು. ಈ ಇಲೆಕ್ಟ್ರಾನ್ ಪ್ರವಾಹ ಹರಿಯಲು ಇಲೆಕ್ಟ್ರಾನ್ ಗಳು ಸುಲಭ ಹರಿಯಲು ಅನುಕೂಲ ಮಾಡಿ ಕೊಡುವ ವಸ್ತು ಬೇಕು. ಅದನ್ನೇ ಕಂಡಕ್ಟರ್ ಅಥವಾ ವಾಹಕ ಎನ್ನುವದು.

ಕಬ್ಬಿಣ(ಐರನ್), ತಾಮ್ರ(ಕಾಪರ್), ಅಲ್ಯುಮಿನಿಯಂ, ಕಂಚು(ಬ್ರಾಸ್) ಹೀಗೆ ಹಲವು ಲೋಹಗಳ ತಂತಿಗಳು ವಿದ್ಯುತ್ ಪ್ರವಾಹ ಹರಿಯಲು ಸೂಕ್ತ ವಾಹಕ(ಕಂಡಕ್ಟರ್) ಆಗಿದೆ.  ಮರ, ಪ್ಲಾಸ್ಟಿಕ್ ಮೊದಲಾದವುಗಳ ವಸ್ತುಗಳು ಈ ಇಲೆಕ್ಟ್ರಾನ್ ಗಳಿಗೆ ಹರಿಯಲು ಬಿಡುವದಿಲ್ಲ. ಅವುಗಳನ್ನು ಅವಾಹಕ(ನಾನ್ ಕಂಡಕ್ಟರ್) ಎನ್ನಬಹುದು.

ವೋಲ್ಟೇಜ್ ಪರಿಚಯ

ಈ ಇಲೆಕ್ಟ್ರಾನ್ ಗಳು ಚಲಿಸಲು ಒತ್ತಡ ಅವಶ್ಯಕ. ಅದು ಇದ್ದರೆ ಮಾತ್ರ ಇಲೆಕ್ಟ್ರಾನ್ ಒಂದು ಕಡೆಯಿಂದ ಇನ್ನೊಂದು ಕಡೆ ವಾಹಕದಲ್ಲಿ ಚಲಿಸುತ್ತವೆ. ಈ ಇಲೆಕ್ಟ್ರಾನ್ ಗಳನ್ನು ತಂತಿಯ ಮೂಲಕ ತಳ್ಳುವ ಒತ್ತಡಕ್ಕೆ ವೋಲ್ಟೇಜ್ ಎನ್ನುತ್ತಾರೆ.

ಇದನ್ನು ವೋಲ್ಟ್ (V) ನಲ್ಲಿ ಅಳೆಯುತ್ತಾರೆ.

ರೆಸಿಸ್ಟನ್ಸ್ / ಪ್ರತಿರೋಧ ಎಂದರೇನು?

ಎಲ್ಲಾ ವಾಹಕಗಳೂ ಇಲೆಕ್ಟ್ರಾನ್ ಗಳನ್ನು ಸುಲಭವಾಗಿ ಹೋಗೊದಕ್ಕೆ ಬಿಡದು. ಕೆಲವು ಇಲೆಕ್ಟ್ರಾನ್ ಗಳಿಗೆ ಜಾಸ್ತಿ ತಡೆ ಒಡ್ಡಿದರೆ ಇನ್ನು ಕೆಲವು ಸುಲಭವಾಗಿ ಹೋಗಲು ದಾರಿ ಮಾಡಿ ಕೊಡುತ್ತವೆ. ಇಲೆಕ್ಟ್ರಾನ್ ಗಳ ಪ್ರವಾಹಕ್ಕೆ ವಾಹಕ ಒಡ್ಡುವ ತಡೆಯನ್ನು ರೆಸಿಸ್ಟನ್ಸ್ / ಪ್ರತಿರೋಧ / ತಡೆ ಎನ್ನುವದು.

ಇದನ್ನು ಓಮ್ಸ್ ನಲ್ಲಿ ಅಳೆಯುತ್ತಾರೆ.

ಕರೆಂಟ್ / ವಿದ್ಯುತ್ ಎಂದರೇನು?

ಈ ಇಲೆಕ್ಟ್ರಾನ್ ಗಳ ಪ್ರವಾಹವನ್ನು ಕರೆಂಟ್ / ವಿದ್ಯುತ್ ಎನ್ನುತ್ತಾರೆ. ಜಾಸ್ತಿ ಇಲೆಕ್ಟ್ರಾನ್ ಗಳು ತಂತಿಯಲ್ಲಿ ಹರಿಯುತ್ತಿದ್ದರೆ ಕರೆಂಟ್ ಜಾಸ್ತಿ ಎಂದರ್ಥ. ಇದನ್ನು ಎಂಪಿಯರ್ (A) ನಲ್ಲಿ ಅಳೆಯುತ್ತಾರೆ.

ಓಮ್ ನ ನಿಯಮ ಕಂಡು ಹಿಡಿದಿದ್ದು ಯಾರು?


ಜರ್ಮನಿಯ ಭೌತಿಕ ಶಾಸ್ತ್ರಜ್ಞ (ಫಿಸಿಸ್ಟ್) ಆದ ಜಾರ್ಜ್ ಸೈಮನ್ ಓಮ್ (Georg Simon Ohm) ಅವರು ವೋಲ್ಟೇಜ್ ಹಾಗೂ ವಿದ್ಯುತ್ ಹರಿವಿನ (ಕರೆಂಟ್) ನಡುವಿನ ಸಂಬಂಧವನ್ನು ತನ್ನ ಪ್ರಯೋಗಗಳಿಂದ ಕಂಡು ಹಿಡಿದರು. 1827ರಲ್ಲಿ ಕಂಡು ಹಿಡಿದ ಆ ನಿಯಮವನ್ನು ಅವರ ಹೆಸರಿನಲ್ಲೇ ಓಮ್ ನ ನಿಯಮ ಎಂದು ಕರೆಯಲಾಗುತ್ತದೆ.
ಚಿತ್ರ ಕೃಪೆ: ವಿಕಿಮಿಡಿಯಾ

ಓಮ್ ನ ನಿಯಮ

ಒಂದು ವಾಹಕದಲ್ಲಿ ಎರಡು ಬಿಂದುಗಳ ನಡುವೆ ಹರಿಯುವ ಕರೆಂಟ್ ಅದರ ನಡುವಿನ ವೋಲ್ಟೇಜ್ ಗೆ ನೇರ ಅನುಪಾತದಲ್ಲಿರುತ್ತದೆ ಇದೇ ಒಮ್ ನ ನಿಯಮ.

I ∝ V

ಅಂದರೆ ವೋಲ್ಟೇಜ್ ಜಾಸ್ತಿ ಆದ ಹಾಗೆ ಕರೆಂಟ್ ಹರಿಯುವಿಕೆ ಅದೇ ವಾಹಕದಲ್ಲಿ ಅಷ್ಟೇ ಪ್ರಮಾಣದಲ್ಲಿ ಜಾಸ್ತಿ ಆಗುತ್ತದೆ. ವೋಲ್ಟೇಜ್ ಕಡಿಮೆ ಆದ ಹಾಗೆ ಕರೆಂಟ್ ಕಡಿಮೆ ಆಗುತ್ತದೆ.

ವಾಹಕದ ಉದ್ದ / ಅಗಲ, ವಾತಾವರಣದ ತಾಪಮಾನ (ಟೆಂಪರೇಚರ್) ಎಲ್ಲಾ ಮೊದಲಿನಷ್ಟೇ ಇರಬೇಕು.

ಓಮ್ ನ ನಿಯಮದ ಸೂತ್ರ

V ಎಂದರೆ ವೋಲ್ಟೇಜ್ ಅಂದು ಕೊಂಡರೆ, I ಎಂದರೆ ಕರೆಂಟ್ ಆಗಿದ್ದರೆ R ಎಂಬುದು ಈ ವಾಹಕದ ಪ್ರತಿರೋಧ ಇರಲಿ ಆಗ ಈ ಮುಂದಿನ ಸಮೀಕರಣ ಒಮ್ ನ ನಿಯಮದ ಸೂತ್ರ ಆಗುತ್ತದೆ.

ವಾಹಕದ ಪ್ರತಿರೋಧ ಅದರ ವಸ್ತುವಿನ ಮೇಲೆ ಆಧಾರಿತ ಆಗಿರುತ್ತದೆ. ಪ್ರತಿ ವಸ್ತುವಿನ ಪ್ರತಿರೋಧ ಬೇರೆ ಬೇರೆ ಇರುತ್ತೆ. 

ಅಷ್ಟೇ ಅಲ್ಲ ಆ ವಾಹಕದ ಉದ್ದ, ಅಗಲ ಕೂಡಾ ಪ್ರತಿರೋಧವನ್ನು ನಿರ್ಧರಿಸುತ್ತದೆ. ವಾಹಕ ಉದ್ದ ಆಗಿದ್ದಷ್ಟು ಪ್ರತಿರೋಧ ಜಾಸ್ತಿ. ಅಗಲ ಜಾಸ್ತಿ ಇದ್ದಷ್ಟು ಪ್ರತಿರೋಧ ಕಡಿಮೆ.

V = IR 

ಇಲ್ಲಿV = ವೋಲ್ಟೇಜ್, I = ಕರೆಂಟ್ , R= ರೆಸಿಸ್ಟನ್ಸ್ / ಪ್ರತಿರೋಧ

ಓಮ್ ನ ನಿಯಮ ಎಲ್ಲಿ ಅನ್ವಯ ಆಗುವದಿಲ್ಲ?

ಓಮ್ ನ ನಿಯಮ ಅನ್ವಯ ಆಗಲು ತಾಪಮಾನ ಒಂದೇ ರೀತಿ ಇರಬೇಕು. ಅಕಸ್ಮಾತ್ ಕರೆಂಟ್ ಜಾಸ್ತಿ ಆದ ಹಾಗೆ ವಾಹಕದ ತಾಪ (ಬಿಸಿ) ಜಾಸ್ತಿ ಆಗುತ್ತಿದ್ದರೆ ಓಮ್ ನ ನಿಯಮ ಅನ್ವಯ ಆಗದು.

ತೆಳುವಾದ ಟಂಗಸ್ಟನ್ ತಂತಿ(ವೈರ್), ಸೆಮಿಕಂಡಕ್ಟರ್ ಇತ್ಯಾದಿಗಳಿಗೆ ಓಮ್ ನ ನಿಯಮ ಅನ್ವಯ ಆಗದು. ಯಾಕೆಂದರೆ ಅವುಗಳು ಕರೆಂಟ್ ಜಾಸ್ತಿ ಆದಂತೆ ಅಥವಾ ಜಾಸ್ತಿ ಹೊತ್ತು ಹರಿದಂತೆ ಬಿಸಿ ಆಗುತ್ತಾ ಹೋಗುತ್ತೆ. ಆಗ ಈ ನಿಯಮ ಹೊಂದಿಕೆ ಆಗದು.

ಹೆಚ್ಚಿನ ಲೋಹ ಹಾಗೂ ಮಿಶ್ರ ಲೋಹಗಳಿಗೆ ಓಮ್ ನ ನಿಯಮ ಅನ್ವಯ ಆಗುತ್ತೆ. ಈ ರೀತಿ ಓಮ್ ನ ನಿಯಮ ಅನ್ವಯ ಆದರೆ ಆ ವಸ್ತುವಿಗೆ ಓಮಿಕ್ ಮಟೀರಿಯಲ್ ಎಂದು ಕರೆಯುತ್ತಾರೆ. ಆಗದಿದ್ದರೆ ನಾನ್ ಓಮಿಕ್ ಮಟೀರಿಯಲ್ ಎನ್ನುತ್ತಾರೆ.

ಕಬ್ಬಿಣ, ಅಲ್ಯುಮಿನಿಯಂ, ತಾಮ್ರ ಎಲ್ಲ ಓಮಿಕ್ ಆಗಿದ್ದರೆ ಸೆಮಿಕಂಡಕ್ಟರ್ ನಾನ್ ಓಮಿಕ್ ಆಗಿವೆ.

ಸೂಪರ್ ಕಂಡಕ್ಟರ್ ಗೂ ಕೂಡಾ ಓಮ್ಸ್ ನ ನಿಯಮ ಅನ್ವಯ ಆಗದು.

೧ ಓಮ್ ಪ್ರತಿರೋಧ (ರೆಸಿಸ್ಟನ್ಸ್) ಎಷ್ಟು?

೧ ವೋಲ್ಟ್ ವೋಲ್ಟೇಜ್ ಅನ್ನು ಒಂದು ವಾಹಕ (ಕಂಡಕ್ಟರ್) ಗೆ ಕೊಟ್ಟರೆ ೧ ಎಂಪಿಯರ್ ಕರೆಂಟ್(ವಿದ್ಯುತ್) ಅದರಲ್ಲಿ ಹರಿದರೆ ಆಗ ಆ ವಾಹಕ ೧ ಓಮ್ ರೆಸಿಸ್ಟನ್ಸ್ / ಪ್ರತಿರೋಧ / ತಡೆ ಹೊಂದಿದೆ ಎನ್ನುತ್ತಾರೆ.

ಕೊನೆಯ ಮಾತು

ಓಮ್ ನ ನಿಯಮ ಒಂದು ಇಲೆಕ್ಟ್ರಿಕ್ ಸರ್ಕ್ಯುಟ್ ಗೆ ಸಂಬಂಧಿಸಿದ ಲೆಕ್ಕಾಚಾರಕ್ಕೆ ಅನುಕೂಲ. ವೋಲ್ಟೇಜ್ ಜಾಸ್ತಿ ಆದ ಹಾಗೆ ಇಲೆಕ್ಟ್ರಾನ್ ಗಳ ಪ್ರವಾಹ ಜಾಸ್ತಿ ಆಗುತ್ತೆ. 

ಚಿತ್ರಕೃಪೆ: Bruno /Germany from Pixabay 
ಚಿತ್ರಕೃಪೆ: Tom from Pixabay 
ಚಿತ್ರಕೃಪೆ: burlesonmatthew from Pixabay

ಎಂತಹ ಜಾಗದಲ್ಲಿ ನೀವು ಮನೆ / ಅಪಾರ್ಟಮೆಂಟ್ ಖರೀದಿಸಬೇಕು?

ನೀವು ಮನೆ ಕಟ್ಟಲು ಜಾಗ ಹುಡುಕುತ್ತಿದ್ದೀರಾ? ಹಾಗಿದ್ದರೆ ಸೈಟ್ ಕೊಳ್ಳುವ ಮುನ್ನ ಈ ಲೇಖನ ಪೂರ್ತಿ ಓದಿ.

ಎಲ್ಲಿ ಮನೆ ಕಟ್ಟಿದರೆ ಒಳ್ಳೆಯದು, ಎಂತಹ ಜಾಗದಲ್ಲಿ ಮನೆ ಕಟ್ಟಬಾರದು ಎಂಬುದನ್ನು ನೋಡೋಣ.

ಮನೆಯ ವಿನ್ಯಾಸ ಎಷ್ಟು ಮುಖ್ಯವೋ ಹಾಗೇ ಮನೆ ಕಟ್ಟುವ ಜಾಗ ಅಷ್ಟೇ ಮುಖ್ಯ . ಉತ್ತಮ ಗಾಳಿ ಬೆಳಕು ಬರುವ ಜಾಗದಲ್ಲಿ ಉತ್ತಮ ಹವಾಮಾನ  ಇರುವ ಪ್ರದೇಶದಲ್ಲಿ ಮನೆ ಕಟ್ಟಿದಾಗ ಆ ಅನುಭವವೇ ಬೇರೆ. ಜಾಗ ಸರಿ ಇರದಿದ್ದರೆ ಮನೆ ಎಷ್ಟು ಸುಂದರ ಇದ್ದರೂ ಉತ್ತಮ ಅನುಭವ ಸಿಗದು.

ಮನೆಗೆ ಎಂತಹ ಜಾಗ ಸೂಕ್ತ?

ಮನೆ ಕಟ್ಟುವ ಜಾಗ ಹೇಗಿರಬೇಕು? ಬನ್ನಿ ನೋಡೋಣ.

೧. ನೀರಿನ ಮೂಲಕ್ಕೆ ಹತ್ತಿರವಾಗಿರಬೇಕು

ನೀರು ಮನೆ ಕಟ್ಟಲು ಹಾಗೂ ಅಲ್ಲಿ ಉಳಿಯಲು ತುಂಬಾ ಅತಿ ಅವಶ್ಯಕ. ನೀರಿಲ್ಲದಿದ್ದರೆ ಉಳಿಗಾಲ ಇಲ್ಲ.

ಬಾವಿ ಕೆರೆ ಬೋರ್ವೆಲ್ ಅಥವಾ ನದಿ ಮೊದಲಾದ ಮೂಲಗಳಿಂದ ನೀರು ಲಭ್ಯ ಇರಬೇಕು ಆದರೆ ಪ್ರವಾಹ ಬರುವಂತಹ ಜಾಗ ಕೂಡ ಆಗಿರಬಾರದು.

೨. ಜಾಗ ಆದಷ್ಟು ಸಮತಟ್ಟಾಗಿರಬೇಕು

ಮನೆ ಕಟ್ಟಿದ ಜಾಗ ಅಂಗಳ ಸುತ್ತಮುತ್ತಲಿನ ಜಾಗ ಸಮತಟ್ಟಾಗಿದ್ದರೆ ಮಾತ್ರ ಅನುಕೂಲ ಜಾಸ್ತಿ.  ಇಲ್ಲದಿದ್ದರೆ ಸಮತಟ್ಟು ಮಾಡಲು ಖರ್ಚಾಗಬಹುದು.  

೩. ಜಾಗ ಗಟ್ಟಿಯಾಗಿರಬೇಕು

ಮನೆ ಕುಸಿಯದಂತೆ ತಳಪಾಯ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ನೆಲ ಗಟ್ಟಿಯಾಗಿರಬೇಕು. 

೪. ಪ್ರಶಾಂತವಾಗಿರುವ ವಾತಾವರಣ ಇರುವ ಕಡೆ

ಪ್ರಶಾಂತವಾದ ವಾತಾವರಣ ಇರುವ ಗದ್ದಲ ಗೌಜಿ ಇಲ್ಲದಂತಹ ಪ್ರದೇಶ ಮನೆ ಕಟ್ಟಲು ಸೂಕ್ತ. ದುಡಿದು ಮನೆಗೆ ಬಂದು ವಿಶ್ರಾಂತಿ ಪಡೆಯಲು ಇಂತಹ ವಾತಾವರಣ ಬೇಕೆ ಬೇಕು .

೫. ಉತ್ತಮ ಅಗಲವಾದ ರಸ್ತೆ ಇರುವ ಕಡೆ


ರಸ್ತೆ ಅನ್ನುವುದು ನಮ್ಮ ರಕ್ತ ನಾಡಿಯಿದ್ದಂತೆ ಉತ್ತಮ ರಸ್ತೆ ನಮ್ಮ ಮನೆಗೆ ತಲುಪಲು ಅಲ್ಲಿಂದ ಹೋಗಿ ಬರಲು ತುಂಬಾ ಸಹಾಯಕವಾಗುತ್ತದೆ . ಮನೆ ಕಟ್ಟುವುದರಿಂದ ಹಿಡಿದು ವಾಹನಗಳ ಓಡಾಟಕ್ಕೆ ರಸ್ತೆ ಇರಲೇಬೇಕು. ಅಗಲವಾದ ರಸ್ತೆ ಮನೆ ಮುಂದೆ ಇದ್ದರೆ ಉತ್ತಮ.

೬. ಉತ್ತಮ ಸೌಲಭ್ಯ ಇರುವ ಕಡೆ


ಆಸ್ಪತ್ರೆ, ಶಾಲೆ, ಕಾಲೇಜು, ಹೋಟೆಲ್ ಹಾಗೂ   ಅಂಗಡಿಗಳು ಹತ್ತಿರದಲ್ಲಿ ಲಭ್ಯವಿರುವ ಕಡೆ  ಮನೆ ಕಟ್ಟಿದರೆ ಒಳ್ಳೆಯದು. ಅಗತ್ಯ ಸೌಲಭ್ಯಗಳ ಅವಶ್ಯಕತೆ ಇದ್ದಾಗ ಇವು ಸಹಾಯಕ. ಆಫೀಸು ಅಥವಾ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದರೆ ಅದು ಹತ್ತಿರದಲ್ಲಿದ್ದರೆ   ಒಳ್ಳೆಯದು.

ವಿದ್ಯುತ್ (ಕರೆಂಟ್) ಸಹ ಇರಬೇಕು. ವಿದ್ಯುತ್ ಇಲ್ಲದ ಕಡೆ ಮನೆ ಕಟ್ಟಿದರೆ ಉಳಿಯುವದು ಕಷ್ಟ. ಇಂದು ಮನೆಯಲ್ಲಿನ ಹಲವು ಉಪಕರಣಗಳಿಗೆ, ಗಾಳಿಗೆ ಅಂದ್ರೆ ಫ್ಯಾನ್ / ಎಸಿ ನಡೆಸಲು, ಬೆಳಕು ಅಂದ್ರೆ ಲೈಟ್ ಗೆ, ಮೊಬೈಲ್ ಚಾರ್ಜಿಂದ ಹಿಡಿದು ಎಲ್ಲ ಕಡೆ ವಿದ್ಯುತ್ ಅತಿ ಮುಖ್ಯ. ಪದೇ ಪದೇ ವಿದ್ಯುತ್ ಹೋಗುವ ಜಾಗ ಸೂಕ್ತ ಅಲ್ಲ.

ಇಂತಹ ಜಾಗ ಸೂಕ್ತ ಅಲ್ಲ 

೧. ಸ್ಮಶಾನಕ್ಕೆ ಹತ್ತಿರ ಇರಬಾರದು


ಸಾವನ್ನು ತಪ್ಪಿಸಿಕೊಳ್ಳಲು ಯಾರಿಂದ ಸಾಧ್ಯ? ಹಾಗಂತ ದಿನ ಹೆಣ ನೋಡುವ ಗ್ರಹಚಾರ ಯಾರಿಗೆ ಬೇಕು? ಸ್ಮಶಾನದ ಪಕ್ಕ ಅಥವಾ ದಾರಿಯಲ್ಲಿ ಮನೆ ಇರದಿರುವದು ವಾಸಿ.

೨. ಮೋರಿಯ / ಚರಂಡಿಯ ಪಕ್ಕ ಇರಬಾರದು 

ಮೋರಿಯಲ್ಲಿ ಹರಿಯುವ ಗಲೀಜು ನೀರು ಉಕ್ಕಿ ಮನೆ ಕಡೆ ಬಂದರೆ ಗತಿ? ಅದೇ ರೀತಿ ಮೋರಿಯಲ್ಲಿ ಕುಳಿತು ಬರುವ ಸೊಳ್ಳೆಗಳು ಹುಳ ಹುಪ್ಪಡಿಗಳು ಸಹಾ ಒಳ್ಳೆಯದಲ್ಲ.ಅಷ್ಟೇ ಅಲ್ಲ ಮೋರಿ ಪಕ್ಕ ದುರ್ವಾಸನೆಯ ಆಗರ ಮೂಗಿ ಮುಚ್ಚಿಕೊಂಡು ಬದುಕುವಂತಹ ಪರಿಸ್ಥಿತಿ ಕೂಡ. 

೩. ಗುಡ್ಡದ ಕೆಳಗೆ ಇರಬಾರದು

ಗುಡ್ಡದ ಮೇಲಿನಿಂದ ಬೀಳುವ ಕಲ್ಲುಗಳು ಮರಗಳು ಮಳೆಗಾಲದಲ್ಲಿ ಕುಸಿಯುವ ಗುಡ್ಡಗಳು ಎಲ್ಲವೂ ಮನೆಗೆ ಅಪಾಯ.

೪. ಕೆರೆಯ ಜಾಗದಲ್ಲಿ, ತಗ್ಗು ಪ್ರದೇಶದಲ್ಲಿ

ಮಳೆಗಾಲದಲ್ಲಿ ಕೆರೆ ತುಂಬಿ ಮನೆಗೆ ನೀರು ಬಂದರೆ ತಗ್ಗು ಪ್ರದೇಶದಲ್ಲಿ ನೀರು ನಿಂತು ಮನೆಯನ್ನು ಆವರಿಸಬಹುದು. ಅಷ್ಟೇ ಅಲ್ಲ ಕೆರೆಯ ಹತ್ತಿರ ಭೂಮಿ ಕೂಡಾ ನೀರಿನ ಕಾರಣ ಮೆತ್ತಗಿದ್ದು ಗಟ್ಟಿ ಇರದು. ಆದ್ದರಿಂದ ಇಂತಹ ಜಾಗ ಆಯ್ಕೆ ಮಾಡದಿರುವುದು ಒಳಿತು.

೫. ಸಮುದ್ರ ತೀರದ ಬಳಿ 

ಸಮುದ್ರ ತೀರದ ಬಳಿ ವಾತಾವರಣದಲ್ಲಿ ಉಪ್ಪಿನಂಶ ಜಾಸ್ತಿ ಇರುತ್ತದೆ ಅವು ತುಕ್ಕು ಹಿಡಿದು ವಸ್ತುಗಳು ಹಾಳಾಗಲು ಕಾರಣವಾಗುತ್ತದೆ.  ಜೊತೆಗೆ ದಿನವಿಡಿ  ಅಲೆಗಳ ಮೊರೆತ ಕೂಡ. 

೬. ಗುಡ್ಡದ ಮೇಲೆ ಅಂಚಲ್ಲಿ

ಗುಡ್ಡದ ಮೇಲೆ ಹತ್ತುವದು ಕಷ್ಟ. ಗುಡ್ಡ ಮಣ್ಣು ಸಡಿಲ ಆದರೆ ಅಥವಾ ತಳಪಾಯ ಸರಿ ಇಲ್ಲದಿದ್ದರೆ  ಬೀಳುವ ಸಾಧ್ಯತೆ. 

೭. ಸಡಿಲ ಮಣ್ಣಿರುವ ಜಾಗದಲ್ಲಿ

ಸಡಿಲ ಮಣ್ಣಿನಲ್ಲಿ ಕಟ್ಟಡಗಳು ಕುಸಿಯುವ ಸಾಧ್ಯತೆ ಇದೆ. ಹಿಂದೆ  ಕೆರೆ ಇದ್ದ ಜಾಗ ಮೆತ್ತಗಿದ್ದು ಕಟ್ಟಡದ ತಳಪಾಯ ಕುಸಿಯುವ ಸಾಧ್ಯತೆ ಹೆಚ್ಚು . ಹಾಗೆ ಆಗದಂತೆ ತಳಪಾಯದ ವಿನ್ಯಾಸ ಮಾಡ ಬೇಕು.

೮. ನೀರಿಲ್ಲದ ಜಾಗದಲ್ಲಿ

ನೀರು ಜೀವಿಗಳಿಗೆ ಅತಿ ಮುಖ್ಯವಾದ  ವಸ್ತು. ಕುಡಿಯುವುದಕ್ಕಾಗಿ ಇರಬಹುದು ಅಥವಾ ಸ್ನಾನಕ್ಕಾಗಿರಬಹುದು ನೀರು ಬೇಕೇ ಬೇಕು. ಬಾವಿ ಬೋರ್ವೆಲ್ ಅಥವಾ ಕಾರ್ಪೊರೇಷನ್ ನೀರಿನ ಮೂಲ ಇದ್ದ ಕಡೆ ಮಾತ್ರ ಮನೆ ಕಟ್ಟಿ. ಇಲ್ಲದಿದ್ದರೆ ಬದುಕುವುದು ದುಸ್ತರವಾಗುತ್ತದೆ.

೯. ಮೈಕ್ ಹಾಕಿ ಕಾರ್ಯಕ್ರಮ ನಡೆಸುವ ಜಾಗಗಳು


ಸಾರ್ವಜನಿಕವಾಗಿ ಮೈಕ್ ಹಾಕಿ ಕಾರ್ಯಕ್ರಮ ನಡೆಸುವಂತಹ ಯಾವುದೇ ಜಾಗದ ಹತ್ತಿರ ಮನೆ ಕಟ್ಟುವುದು ಅಷ್ಟೊಂದು ಸೂಕ್ತವಲ್ಲ ಕಾರಣ ಇಷ್ಟೇ  ಇಂತಹ ಕಾರ್ಯಕ್ರಮ ನಡೆಯುವಾಗ ಮಕ್ಕಳಿಗೆ ಪರೀಕ್ಷೆ ಅಥವಾ ಇನ್ನಿತರ ಅವಶ್ಯಕತೆ ಇದ್ದಾಗ ಈ ಈ ಮೈಕ್ ಸದ್ದು ಗಲಾಟೆ ಎನಿಸಬಹುದು ಶಾಂತತೆಗೆ ಭಂಗ ತರಬಹುದು.

೧೦. ವಿಷ ಕಾರುವ ಕಾರ್ಖಾನೆ ಪಕ್ಕ

ಹೊಗೆ ಕಾರುವ ಕಾರ್ಖಾನೆ ಇರಬಹುದು ಅಥವಾ ಪಟಾಕಿ ಸಿಡಿಮದ್ದು ಮೊದಲಾದ ಹಾನಿಕಾರಕ ವಸ್ತುಗಳ ನಿರ್ಮಾಣ ಕಂಪನಿ ಸಹ ಇರಬಹುದು. ಪೆಟ್ರೋಲ್ ಬಂಕ್ ಇರಬಹುದು ಹಾನಿಕಾರಕ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಸಂಗ್ರಹಿಸುವ  ಗೋಡೌನ ಇರಬಹುದು ಇವುಗಳ ಪಕ್ಕ ಮನೆ ಕಟ್ಟುವುದು  ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ .

೧೧. ಕಾಡಿನ ಮಧ್ಯೆ ಅಥವಾ ಅಂಚಿನಲ್ಲಿ

ದುರ್ಗಮ ಅರಣ್ಯದಲ್ಲಿ ಅಥವಾ ಕಾಡಿನ ಅಂಚಿನಲ್ಲಿ ಮನೆ ಕಟ್ಟುವುದು ಒಳ್ಳೆಯದಲ್ಲ ಯಾಕೆಂದರೆ ಕಾಡು ಪ್ರಾಣಿಗಳ ಆಕ್ರಮಣ ಹಾಗೂ ದುಷ್ಟ ಜಂತುಗಳಿಂದ ಅಪಾಯ ಯಾವಾಗಲೂ ಇದ್ದೇ ಇದೆ . ಸಾಧ್ಯವಾದಷ್ಟು ಕಾಡಿನಿಂದ ದೂರದಲ್ಲಿ ನಗರದಲ್ಲಿಯೂ ಅಥವಾ ಚಿಕ್ಕ ಪಟ್ಟಣದಲ್ಲಿ ಮನೆ ಕಟ್ಟುವುದು ಒಳಿತು .

೧೨. ನದಿಯ ತೀರದಲ್ಲಿ 

ನದಿಯ ತೀರ ಕೂಡ ಮನೆ ಕಟ್ಟಲು ಸೂಕ್ತ ಜಾಗವಲ್ಲ ಯಾಕೆಂದರೆ ಮಳೆಗಾಲದಲ್ಲಿ ಪ್ರವಾಹ ಬಂದು ಮನೆಗೆ ಅಪಾಯ ಅಥವಾ ಮನೆಯ ಒಳಗೆ ನೀರು ನುಗ್ಗುವ ಸಾಧ್ಯತೆ ಇದೆ.

೧೩. ಮರುಭೂಮಿಯಲ್ಲಿ

ಮರುಭೂಮಿ ಅಥವಾ ಹವಾಮಾನ ತಾಪ ತುಂಬಾ ಅತಿ ಇರುವಲ್ಲಿಯೂ ಕೂಡ ಮನೆ ಕಟ್ಟುವುದು ಸೂಕ್ತವಲ್ಲ . ನೀರಿನ ಕೊರತೆ ಮತ್ತು ತಡೆಯಲಾರದಷ್ಟು ಸೆಕೆ ಕೂಡಾ ಅಲ್ಲಿ ಉಳಿಯುವುದು  ಕಷ್ಟವಾಗುತ್ತದೆ .

೧೪. ವಿಷಮ ವಾತಾವರಣ ಇರುವ ಜಾಗ

ಅತಿಯಾದ ಮಳೆ ಅತಿಯಾದ ಸೆಕೆ ಹಾಗೂ ಅತಿಯಾದ ಚಳಿ ಇರುವಂತಹ ಜಾಗವೂ ಕೂಡ ಮನೆ ಕಟ್ಟಲು ಸೂಕ್ತವಲ್ಲ ಆದರೆ ಕೆಲವೊಮ್ಮೆ ಅನಿವಾರ್ಯವಾದರೆ ಬೇರೆ ಗತಿ ಇಲ್ಲ ಆದರೂ ಸಾಧ್ಯವಿದ್ದಷ್ಟೂ ಉತ್ತಮ ವಾತಾವರಣ ಜಾಗ ಆರಿಸಿಕೊಳ್ಳುವುದು ಒಳ್ಳೆಯದು .

೧೫. ಕಸ ಹಾಕುವ ಜಾಗ


ಸಾಮಾನ್ಯವಾಗಿ ಶಹರಗಳಲ್ಲಿ ಊರಿನಲ್ಲಿ ಉಂಟಾದ ಎಲ್ಲ ಕಸವನ್ನು ಸಂಗ್ರಹಿಸಿ ಊರ ಹೊರಗೆ ಒಂದು ಜಾಗದಲ್ಲಿ ಹಾಕಿ ಅದನ್ನು ಸಂಸ್ಕರಿಸುತ್ತಾರೆ ಅಥವಾ ಸುಟ್ಟು ಹಾಕುತ್ತಾರೆ ಅಂತಹ ಜಾಗವನ್ನು ಮನೆಕಟ್ಟಲು ಆಯ್ದು ಕೊಳ್ಳದಿರುವುದು ಒಳ್ಳೆಯದು.

ಕೊನೆಯ ಮಾತು

ಅನೇಕ ಬಾರಿ ಎಲ್ಲವು ಸರಿ  ಇರುವ ಕೊರತೆ ಇರದ ಜಾಗ ಸಿಗುವದು ಕಷ್ಟ. ಆಗ ಹೊಂದಾಣಿಕೆ ಅನಿವಾರ್ಯ.

ಮೊದಲ ಪ್ರಕಟಣೆ: ಎಪ್ರಿಲ್ ೮, ೨೦೧೮, ವಿಸ್ಮಯ ಪತ್ರಿಕಾದಲ್ಲಿ

ಬರೆದವರು: ರಾಜೇಶ ಹೆಗಡೆ

ಚಿತ್ರಕೃಪೆ todd kent on Unsplash

ಚಿತ್ರಕೃಪೆ Karsten Würth on Unsplash

ಚಿತ್ರಕೃಪೆ Martha Dominguez de Gouveia on Unsplash

ಚಿತ್ರಕೃಪೆ Einar Storsul on Unsplash

ಚಿತ್ರಕೃಪೆ Miguel A Amutio on Unsplash

ಚಿತ್ರಕೃಪೆ Kouji Tsuru on Unsplash

ಚಿತ್ರಕೃಪೆ Juli Kosolapova on Unsplash

ಚಿತ್ರಕೃಪೆ Evan Demicoli on Unsplash

© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ